Pages

Friday, December 17, 2010

ಉತ್ತರ ಕನ್ನಡ ಜಿಲ್ಲೆಯ ಗೌಳಿ ಜನಾಂಗ ಹಾಗೂ ಶುಚಿತ್ವ

ಕರ್ನಾಟಕದ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಘಟ್ಟದ ಮೇಲ್ಭಾಗದ ಅರಣ್ಯಗಳಲ್ಲಿ ಮಹಾರಾಷ್ಟ್ರ ಮೂಲದ ವನವಾಸಿಗಳು ವಾಸಿಸುತ್ತಿರುತ್ತಾರೆ. ಇವರು ಮುಖ್ಯವಾಗಿ ಎಮ್ಮೆಗಳನ್ನು ಸಾಕಿ ಅವುಗಳಿಂದ ಬಂದ ಉತ್ಪನ್ನಗಳಿಂದ ಜೀವನ ಸಾಗಿಸುತ್ತಿದ್ದಾರೆ. ಈ ಜನಾಂಗದವರು ೨೧ನೇ ಶತಮಾನದಲ್ಲಿಯೂ ಸಹ ನಾಗರೀಕತೆಯಿಂದ ಸ್ವಲ್ಪ ದೂರದಲ್ಲಿರುವರೆಂದರೆ ತಪ್ಪಾಗಲಾರದು. ಇವರ ಮೂಲ ಕಸಬು ಎಮ್ಮೆಗಳನ್ನು ಸಾಕುವುದು. ಕಾಡಿನಲ್ಲಿಯೇ ವಾಸಿಸುವ ಈ ಜನಾಂಗದವರು ಎಮ್ಮೆಗಳನ್ನು ಕಾಡಿನಲ್ಲಿ ಬಿಡುತ್ತಾರೆ. ಅವುಗಳು ವಾಪಸ್ ತಾವು ವಾಸಿಸುವ ತಾಣಗಳಾದ ದೊಡ್ಡಿಗಳಿಗೆ ಬಂದಾಗ ಅವುಗಳಿಂದ ಅಲ್ಪ ಸ್ವಲ್ಪ ಹಾಲನ್ನು ಕರೆದು, ಹಾಲನ್ನು ಮಾರಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇಂದೂ ಸಹ ಈ ಜನಾಂಗದಲ್ಲಿ ಓದಿದವರು ಬಹಳಷ್ಟು ಜನರಿಲ್ಲ. ಅವರಲ್ಲಿ ಹೆಚ್ಚಿನ ಜನರು ಮರಾಠಿ ಮಾತನಾಡುತ್ತಾರೆ. ಈ ಜನರಿರುವ ’ಗೌಳಿ ದೊಡ್ಡಿ’ಗಳಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ಸುರಕ್ಷಿತ ಕುಡಿಯುವ ನೀರು, ಶಾಲೆಗಳು, ಆರೋಗ್ಯ ವ್ಯವಸ್ಥೆಯನ್ನು ಒದಗಿಸಲು ಹಾಗೂ ಅವರ ಕೌಶಲ್ಯ ಅಭಿವೃದ್ಧಿಗೆ ಪ್ರಯತ್ನಗಳು ಮುಂದುವರಿದಿದೆ. ಆದರೆ, ಜನರಲ್ಲಿ ಅರಿವಿನ ಕೊರತೆಯಿರುವುದರಿಂದ ಇಂತಹ ಪ್ರಯತ್ನಗಳಿಗೆ ಅಷ್ಟೇನು ಸ್ಪಂದಿಸದ ಈ ಜನರು ಇಂದೂ ಸಹ ಕಾಡಿನ ವಾಸಿಗಳಂತೆಯೇ ಜೀವನ ಸಾಗಿಸುತ್ತಿದ್ದಾರೆ. ಈ ಗೌಳಿ ದೊಡ್ಡಿಗಳು ಅರಣ್ಯದ ಮಧ್ಯದಲ್ಲಿರುವ ಅತಿಕ್ರಮಣ ಪ್ರದೇಶಗಳಾಗಿರುವುದರಿಂದ ಸರ್ಕಾರದಿಂದ ಅಭಿವೃದ್ಧಿಪಡಿಸಲು ಸಹ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಪಡಿಸಿ ಕೊಟ್ಟಿರುವ ರಸ್ತೆ ಮತ್ತು ಚರಂಡಿಗಳನ್ನು ಸಹ ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ಜನಾಂಗದವರು ಕಾಡಿನ ಮಧ್ಯದಲ್ಲಿ ವಾಸಿಸುತ್ತಿರುವುದರಿಂದ ಅಷ್ಟೇನು ಶುಚಿತ್ವದ ಮಹತ್ವವನ್ನು ತಿಳಿಯದ ಇವರ ವೈಯಕ್ತಿಕ ಸ್ವಚ್ಚತೆ ಬಗ್ಗೆ ಕೇಳುವುದೇ ಬೇಕಿಲ್ಲ. ಇವರಿಗೆ ಕಾಡೇ ಶೌಚಾಲಯವಾಗಿದೆ. ಶೌಚಾಲಯವೆಂದರೆ ಏನೆಂದು(ಸಂಡಾಸ) ಕೇಳುವ ಈ ಜನರಿಗೆ ಅರಿವು ಮೂಡಿಸುವಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಲಹೆಗಾರರು ಹಾಗೂ ಸರ್ಕಾರದ ವಿವಿಧ ಹಂತದ ಸಿಬ್ಬಂದಿಗಳು ಹರ ಸಾಹಸ ಪಡಬೇಕಾಯಿತು. ಇವರು ವಾಸಿಸುವ ಸ್ಥಳಗಳಾದ ಗೌಳಿ ದೊಡ್ಡಿಗಳಿಗೆ ಭೇಟಿ ನೀಡಿದಂತಹ ವೇಳೆಯಲ್ಲಿ ಮಹಿಳೆಯರಷ್ಟೇ ಇರುತ್ತಿದ್ದರು. ಇವರುಗಳು ಬಹಳ ನಾಚಿಕೆ ಸ್ವಭಾವದವರು. ಇವರುಗಳನ್ನು ಒಂದು ಕಡೆ ಸೇರಿಸಿ, ಮರಾಠಿ ಮಾತನಾಡುವ, ಕನ್ನಡ ಭಾಷೆ ಸರಿಯಾಗಿ ಅರ್ಥವಾಗದ ಇವರಿಗೆ ಶೌಚಾಲಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಮೊದಲು ಭೇಟಿ ನೀಡಿದ ಸಂದರ್ಭದಲ್ಲಿ ಇವರುಗಳಿಗೆ ಮೊದಲ ಪ್ರಶ್ನೆಯಾಗಿ ಕೇಳಿದ್ದು, ನಿಮ್ಮ ಬಂಧುಗಳಾದ ಕೊಲ್ಲಾಪುರದಲ್ಲಿರುವ ನಿಮ್ಮ ಸಂಬಂಧಿಗಳು ಇಲ್ಲಿಗೆ ಏತಕ್ಕಾಗಿ ಬರುತ್ತಿಲ್ಲ. ಆಗ ಅವರು ಯೋಚಿಸಿ, ಯೋಚಿಸಿ ಹೇಳಿದ ಉತ್ತರವೆಂದರೆ ನಮ್ಮಲ್ಲಿ "ಸಂಡಾಸಿಲ್ಲ", ಅದಕ್ಕೋಸ್ಕರ ಅವರು ಬರುತ್ತಿಲ್ಲವೆಂದು. ನಂತರದ ಭೇಟಿಗಳಲ್ಲಿ ಅವರುಗಳಿಗೆ ನಿಮ್ಮ ಸಂಬಂಧಿಕರು ನಿಮ್ಮ ಮನೆಗೆ ಬರುವುದು ಬೇಡವೇ ಎಂದು ಕೇಳಿದಾಗ, ಅವರು ಬರಬೇಕು ಅದಕ್ಕೆ ಸಂಡಾಸು ಬೇಕೆಂದು. ಇಷ್ಟೇ ಅಲ್ಲದೆ ವಯಸ್ಸಿಗೆ ಬಂದಂತಹ ಶಾಲೆಗೆ ಹೋಗುವ ಹೆಣ್ಣುಮಕ್ಕಳಿಂದ ಈ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಹಾಗೂ ಸರ್ಕಾರದ ವಸತಿ ನಿಲಯಗಳಲ್ಲಿ ವಾಸಿಸುವ ಮಕ್ಕಳಿಂದ ಅವರ ಪೋಷಕರಿಗೆ ತಂದೆ-ತಾಯಿಂದಿರಿಗೆ ಪತ್ರ ಬರೆಯಿಸುವ ಮೂಲಕ ಸಂಡಾಸದ ಮಹತ್ವವನ್ನು ತಿಳಿಸಲು ಪ್ರಯತ್ನ ಬಹಳ ದೊಡ್ಡ ಯಶಸ್ಸನ್ನು ಸಾಧಿಸುವಲ್ಲಿ ಸಹಾಯಕಾರಿಯಾಯಿತು. ಇಂದು ಎಲ್ಲಾ ಗೌಳಿ ದೊಡ್ಡಿಗಳಲ್ಲಿ ಗೌಳಿ ಜನಾಂಗದವರು ಸಂಡಾಸನ್ನು ಕಟ್ಟಿಕೊಂಡು ಬಳಸುತ್ತಿದ್ದಾರೆ. ಅವರೇ ಹೇಳುವಂತೆ "ನಮ್ಮ ಪರಿಸರದಲ್ಲಿ ಶೌಚಾಲಯಗಳಿರಬೇಕು. ಪರಿಸರವೇ ಶೌಚಾಲಯವಾಗಬಾರದೆಂದು.

ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಲ್ಲದ ಈ ಜನರೇ ಶೌಚಾಲಯ ಕಟ್ಟಿಸಿಕೊಳ್ಳುತ್ತಿರುವುದು ನಿಜವಾಗಲೂ ಸ್ವಚ್ಚತಾ ಆಂದೋಲನಕ್ಕೆ ಯಶಸ್ಸಿನ ದಾರಿ ತೋರಿದಂತಾಗಿದೆ. ಈಗ ಮಾದರಿಯಾಗಿರುವ ಗೌಳಿಗಳು ಸ್ವಚ್ಚತಾ ದೂತರಂತೆ ಆಂದೋಲನದ ಮಾರ್ಗದರ್ಶಕರಾಗಿರುವುದು ಮಹತ್ವದ ವಿಚಾರ. ಇದರಿಂದ ಯಲ್ಲಾಪುರ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಪ್ರಗತಿ ಸಾಧಿಸಿ "ನಿರ್ಮಲ ತಾಲ್ಲೂಕ" ಪ್ರಶಸ್ತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ ತೀರ ಪ್ರದೇಶ, ಘಟ್ಟ ಪ್ರದೇಶ ಹಾಗೂ ಬಯಲು ಸೀಮೆಯನ್ನು ಹೊಂದಿರುವುದರಿಂದ ಹಾಗೂ ಜನರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಆಧರಿಸಿ ಪ್ರಗತಿ ಸಾಧಿಸಲಾಗಿದೆ. ಇದೇ ಪ್ರಯತ್ನವನ್ನು ಮುಂದುವರಿಸಿ ಜನರ ಸಹಕಾರ, ಸಹಭಾಗಿತ್ವದೊಂದಿಗೆ "ನಿರ್ಮಲ ಜಿಲ್ಲೆ"ಯನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ಸಮಾಜದ ಎಲ್ಲಾ ಸ್ಥರದ ಜನರೂ ಭಾಗೀದಾರರಾಗುವುದು ಅತೀ ಮಹತ್ವದ ವಿಚಾರವಾಗಿದೆ.

ಇಂದು ಬಹಳಷ್ಟು ಜನರು ಅವರವರ ಮನೆಗಳಲ್ಲಿ ಎಲ್ಲಾ ಆಧುನಿಕ ವಸ್ತುಗಳನ್ನು ಅಂದರೆ ಟಿವಿ, ರೇಫ್ರೀಜರೇಟರ್, ಮೊಬೈಲ ಸೆಟ್, ಬೈಕ್ ಇತ್ಯಾದಿಗಳನ್ನು ಹೊಂದಿದ್ದರೂ, ವೈಯಕ್ತಿಕ ಶೌಚಾಲಯ ಹೊಂದುವ ಬಗ್ಗೆ ಇನ್ನೂ ಸಹ ಹೆಚ್ಚಿನ ಆಸಕ್ತಿವಹಿಸದೇ ಇರುವುದು ಅವರ ಚಿಂತನೆಯ ಬಗ್ಗೆ ಹಿಡಿದ ಕನ್ನಡಿಯಾಗಿರುತ್ತದೆ. ಇಂದು ದೇವಾಲಯಕ್ಕೆ ಪ್ರತಿನಿತ್ಯ ಹೋಗುವ ಜನರು ವಿರಳವಿರಬಹುದು. ಆದರೆ ಪ್ರನಿತಿತ್ಯ ಶೌಚಾಲಯಕ್ಕೆ ಹೋಗದೆ ಇರುವವರ ಸಂಖ್ಯೆಯು ಅಷ್ಟೇ ವಿರಳವೆನ್ನುವುದು ಕಟು ಸತ್ಯ. ಇದಕ್ಕಾಗಿಯೇ ಗಾಂಧೀಜೀಯವರು ಎಲ್ಲಾ ಆಲಯಗಳಿಗಿಂತ ಶೌಚಾಲಯ ನಮ್ಮ ದಿನನಿತ್ಯದ ಬದುಕಿನಲ್ಲಿ ಬಹಳ ಮಹತ್ವದ್ದಾಗಿದೆಯೆಂದಿದ್ದರು.

ವಿಶ್ವಸಂಸ್ಥೆಯವರು ಭಾರತದೇಶ ೨೦೧೨ ರ ಸುಮಾರಿಗೆ ಶೇ. ೬೦ ರಷ್ಟು ಶುಚಿತ್ವವನ್ನು ಸಾಧಿಸಬೇಕೆಂದು ತಿಳಿಸಿದೆ. ಇಂದು ಭಾರತದಲ್ಲಿ ವೈಯಕ್ತಿಕ ಶೌಚಾಲಯಗಳ ಪ್ರಮಾಣ ಸರಾಸರಿ ೩೦ ರಷ್ಟಿದೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶ ಹಾಗೂ ಪಟ್ಟಣಗಳಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ಶೌಚಾಲಯದ ನಿರ್ಮಾಣ ಹಾಗೂ ಬಳಕೆಯ ಬಗ್ಗೆ ಆಧ್ಯತೆಯನ್ನು ನೀಡಬೇಕಾಗಿದೆ. ಇದರಿಂದ ಆಯಾ ಪ್ರದೇಶಗಳಲ್ಲಿ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳು, ಅಶುಚಿತ್ವದಿಂದ ಬರುವ ಖಾಯಿಲೆಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಪಾತ್ರವಹಿಸಬಲ್ಲದು. ಇದರಿಂದ ಪರಿಸರ ರಕ್ಷಣೆ ಹಾಗೂ ಜಲಮೂಲಗಳ ಮಾಲಿನ್ಯವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

No comments:

Post a Comment