Pages

Thursday, December 16, 2010

ತಾಪಮಾನ ನಿಯಂತ್ರಣಕ್ಕೆ 'ಗ್ರೀನ್ ಪವರ್ '

ಮನುಷ್ಯನ ಬದುಕಿನ ಅವಿಭಾಜ್ಯ ಅಂಶ ’ಪವರ್’. ಈ ಪವರ್ ಅಥವಾ ’ಶಕ್ತಿ’ ಮಾನವನ ಇಂದಿನ ಎಲ್ಲಾ ಚಟುವಟಿಕೆಗಳಿಕೆ ಅತಿ ಮುಖ್ಯವಾದದ್ದು. ಇಂದು ಈ ಶಕ್ತಿಯನ್ನು ಇಂಧನಗಳಿಂದ ಪಡೆಯುತ್ತಿದ್ದೇವೆ. ವಿದ್ಯುತ್ತನ್ನು ಸಹ ಇಂಧನ ಮೂಲಗಳನ್ನು ಉಪಯೋಗಿಸಿ ಪಡೆಯಲಾಗುತ್ತಿದೆ.ಈಗಿನ ದಿನಗಳಲ್ಲಂತು ವಿದ್ಯುತ್ ಇಲ್ಲದೆ ಬದುಕನ್ನು ಸಾಗಿಸುವುದು ಕಷ್ಟವಾಗಬಹುದು. ಸಾಂಪ್ರದಾಯಿಕ ರೀತಿಯಲ್ಲಿ ವಿದ್ಯುತ್ತನ್ನು ಉಷ್ಣಸ್ಥಾವರ, ಅಣುಶಕ್ತಿ, ಅನಿಲ ಮತ್ತು ಕಲ್ಲೆಣ್ಣೆಯ ಸ್ಥಾವರಗಳಿಂದ ಹಾಗೂ ಜಲ ವಿದ್ಯುತ್ ಘಟಕಗಳಿಂದ ಉತ್ಪಾದಿಸಲಾಗುತ್ತಿದೆ. ಇದರಿಂದ ಸ್ವಾಭಾವಿಕ ಪರಿಸರಕ್ಕೆ ಸಾಕಷ್ಟು ಹಾನಿಯುಂಟುಮಾಡಿದ್ದಲ್ಲದೆ, ಭವಿಷ್ಯದಲ್ಲಿ ಬರಿದಾಗುವಂತಹ ಇಂಧನಗಳನ್ನು ಉಪಯೋಗಿಸಿ ವಿದ್ಯುತ್ ಉತ್ಪಾದಿಸುತ್ತಿರುವುದು, ಮುಂಬರುವ ವರ್ಷಗಳಲ್ಲಿ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಗಂಭೀರವಾದ ಪರಿಣಾಮವನ್ನು ಬೀರಲಿದೆ.

ಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಪಡೆಯಲು ಪರಿಸರವನ್ನು ಹಾಗೂ ಸಾಕಷ್ಟು ಅರಣ್ಯ ಪ್ರದೇಶಗಳನ್ನು ಮುಳುಗಡೆಗೊಳಿಸಿ, ಜಲ ವಿದ್ಯುತ್‌ಗಾಗಿ ಬೃಹತ್ ಅಣೆಕಟ್ಟೆಗಳನ್ನು ನಿರ್ಮಿಸಿ ವಿದ್ಯುತ್ತನ್ನು ಪಡೆಯುತ್ತಿದ್ದೇವೆ. ಇದು ಅನಿವಾರ್ಯವಾಗಿತ್ತು. ನೆಮ್ಮೆಲ್ಲಾ ಅಭಿವೃದ್ಧಿಗೆ ವಿದ್ಯುತ್ ಅತ್ಯಾವಶ್ಯಕ ಹಾಗೂ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವುದು ಸಹ ಸಹಜವಾದದ್ದೆ.

ಆದರೆ ಇನ್ನಷ್ಟು ಪರಿಸರವನ್ನು ನಾಶಪಡಿಸಿ ವಿದ್ಯುತ್ ಪಡೆಯಬೇಕಂದು ಯೋಚಿಸಬೇಕಿದೆ. ಹಾಗು ಎಲ್ಲ ಪ್ರಜ್ಞ್ಯಾವಂತರು ಚರ್ಚಿಸಬೇಕಾದ ಮಹತ್ವದ ವಿಷಯ ನಮ್ಮ ಅಭಿವೃದ್ಧಿ ಸುಸ್ಥಿರವಾಗಿರಬೇಕಾದರೆ , ಸುಸ್ಥಿರ ಪರಿಸರ ಅವಶ್ಯಕತೆಯ ಬಗ್ಗೆ  ಚಿಂತಿಸಬೇಕಿದೆ. ಇಂದು ಅರ್ಥಿಕ ಭದ್ರತೆ ಪರಿಸರ ಭದ್ರತೆ ಹಾಗು ಇಂಧನ ಭದ್ರತೆ ಬಗ್ಗೆ ಯೋಚಿಸಿ ಯೋಜಿಸುವ  ಕಾಲವಿದು. ಇಧನ್ನು ಅಂಗ್ಲ ಬಾಷೆಯಲ್ಲಿ  '3E 's ಎಂದು ಗುರುತಿಸಲಾಗಿದೆ (Energy, Ecology, Economy) ಈ ಮೂರು ಅಂಶಗಳು ಇಂಧನ ಅಭಿವೃದ್ಧಿಯಲ್ಲಿ ಅಳವಡಿಸಬೇಕಾಗಿದ್ದು ಅವು ಒಂದ್ದೆಕ್ಕೊಂದು ತೆಕ್ಕೆ ಹಾಕಿಕೊಂಡಿವೆ. ಇದನ್ನು ಗಮನಿಸಿದಾಗ ಯಾವುದೇ ಅಭಿವೃದ್ಧಿ ಪರಿಸರದ ಜೊತೆ ಜೊತೆಗೆ  ಒಂದು ಮತ್ತೊಂದನ್ನು ನಾಶಪಡಿಸದೆ, ನಾಶಪಡಿಸಿದರು ಕನಿಷ್ಠ ಪ್ರಮಾಣದಲ್ಲಿ ಪರಿಸರಕ್ಕೆ ಧಕ್ಕೆ ಉಂಟುಮಾಡಿದಲ್ಲಿ ದಲ್ಲಿ ಮಾತ್ರ ಸುಸ್ಥಿರತೆಯನ್ನು ತರಲು ಸಾಧ್ಯವಾಗಬಹುದು. ಆದುದರಿಂದ ಇಂದು ವಿದ್ಯುತ್ ಉತ್ಪಾದನ ಕ್ಷೇತ್ರದಲ್ಲಿ ಸಹ ಪರಿಸರಕ್ಕೆ ಕನಿಷ್ಠ ಹಾನಿ ಉಂಟುಮಾಡುವ ನವೀಕರಿಸಬಹುದಾದ  , ಪರಿಸರದಲ್ಲಿ ಹೇರಳವಾಗಿ ದೊರಯುವ ಮೂಲಗಳಾದ ಸೂರ್ಯನ ಶಕ್ತಿಯನ್ನು ಗಾಳಿಯ ಶಕ್ತಿಯನ್ನು ಹಾಗು ಸಣ್ಣ ಸಣ್ಣ ಜಲ ವಿದ್ಯುತ್ ಘಟಕಗಳಿಂದ ವಿದ್ಯುತ್ ಪಡಯಬಹುದಾಗಿದೆ . ಇವುಗಳ ಉತ್ಪಾದನೆಯಿಂದ ಪರಿಸರ ಮಾಲಿನ್ಯ ವಾಗಲಿ, ಭೂತಾಪಮಾನ ಏರಿಕೆಯಾಗಲಿ ,ಹಸಿರು ಮನೆ ಅನಿಲಗಳಾದ ಇಂಗಾಲದ  ಡೈ ಕ್ಸೈಡ್   ಮೀತೆನ್ ಅಥವಾ ನೈಟ್ರಸ್ ಆಕ್ಸೈಡ್ ಗಳನ್ನಾಗಲಿ  ವಾತಾವರಣಕ್ಕೆ ಸೇರಿಸುವುದಿಲ್ಲ, ಇಂತಹ ಯಾವುದೆ ಕ್ರಿಯೆ, ಚಟುವಟಿಕೆ ಅಥವಾ ಅಭಿವೃದ್ಧಿಯಿಂದ ಹಸಿರುಮನೆ ಅನಿಲಗಳು  ಸೇರ್ಪದೆಯಾಗುವುದಿಲ್ಲವೋ ಅಂತಹ ವಿದ್ಯುತ್ ಉತ್ಪಾದನೆಯನ್ನು ಹಸೀರು ವಿದ್ಯುತ್ (ಗ್ರೀನ್ ಪವರ್ )ಹಾಗು ಸ್ವಚ್ಚ್ಹ ಅಭಿವೃದ್ಧಿ ತಂತ್ರಜ್ಞ್ಯಾನವೆಂದು ಕರೆಯಲಾಗುತ್ತೆದೆ. ಈ ಹಸಿರು ಅಥವಾ ಗ್ರೀನ್ ಎನ್ನುವ ಪದವನ್ನು ಸಸ್ಯಗಳಿಂದ ಪದಯಲಾಗಿದೆ, ಏಕೆಂದರೆ ಕೇವಲ ಬಣ್ಣದಿಂದ ಹಸಿರಾಗುವುದಲ್ಲ. ಹಸಿರು ಮನೆ ಅನೀಲಗಳ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ತಂತ್ರಜ್ಞ್ಯಾನವನ್ನುಸ್ವಚ್ಚ್ಹ ಅಭಿವೃದ್ಧಿ ತಂತ್ರಜ್ಞ್ಯಾನದಿಂದ (ಕ್ಲೀನ್ ಡೇವ್ಲೋಪ್ಮೆಂಟ  ಮೆಕಾನಿಸಂ) ಕರೆಯಲ್ಪಟ್ಟಿದೆ. ಇಂತಹ ತಂತ್ರಜ್ಞ್ಯಾನದಿಂದ ಉತ್ಪಾದನೆಯಾಗುವ ವಸ್ತುಗಳಾಗಬಹುದು  , ಚಟುವಟಿಕೆಯಿರಬಹುದು ಇಂತಹದಕ್ಕೆ ಹಸಿರು ಪದವನ್ನು ಸೇರಿಸಿ ಬಳಕೆ ಯಲ್ಲಿ ತರಲಾಗಿದೆ. ಉದಾ: ಹಸಿರು  ವಿದ್ಯುತ್, ಹಸಿರು ಅಭಿವೃದ್ಧಿ, ಹಸಿರು ಸಾರಿಗೆ ..ಇತ್ಯಾದಿಗಳು

ಇಂಧನ ಉಳಿತಾಯ: ೧. ನವೀಕರಿಸಬಹುದಾದ ಇಂಧನ ಬಳಕೆ ಹಾಗೂ ಇಂಧನ ಉಳಿತಾಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ "ಒಂದು ಯೂನಿಟ್ ವಿದ್ಯುತ್ ಉಳಿತಾಯ ಎರಡು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮ" ಎನ್ನುವ ನಾಣ್ಣುಡಿಯನ್ನು ಸಾಕಾರಗೊಳಿಸಬೇಕಾದುದು ಇಂದಿನ ದಿನಮಾನಗಳಲ್ಲಿ ಬಹಳ ಮುಖ್ಯ. ನಮ್ಮ ರಾಷ್ಟ್ರದ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ. ೨೦ರಷ್ಟು ಬೆಳಕಿಗಾಗಿಯೇ ವ್ಯಯವಾಗುತ್ತಿದೆ. ರಾಷ್ಟ್ರದಲ್ಲಿ ಒಟ್ಟು ಉತ್ಪಾದಿಸಲಾಗುತ್ತಿರುವ ೧೫೦೦೦೦ ಮೆ.ವಾ. ವಿದ್ಯುತ್‌ನಲ್ಲಿ ಇಂಧನ ಉಳಿತಾಯ ಒಂದರಿಂದಲೇ ಶೇ. ೨೫ರಷ್ಟು ವಿದ್ಯುತ್ ಉಳಿಸಲು ಸಾಧ್ಯವಾಗುವುದು. ಕನಿಷ್ಠ ೨೫೦೦೦ ದಿಂದ ೩೦೦೦೦ ಮೆ.ವಾ. ವಿದ್ಯುತ್ ಉಳಿಸಬಹುದೆಂದು ಅಂದಾಜಿಸಲಾಗಿದೆ.

೨. ವಿದ್ಯುತ್ ಉಳಿತಾಯ ನಮ್ಮ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ ಸಾಮಾನ್ಯವಾಗಿ, ಹೆಚ್ಚಿನ ಬೆಳಕು ಹಾಗೂ ಗಾಳಿ ಇರುವ ಮನೆಗಳಲ್ಲಿ ಹಗಲಿನ ಸಮಯದಲ್ಲಿ ವಿದ್ಯುತ್ ಬಳಕೆಯ ಅವಶ್ಯಕತೆ ಬರುವುದಿಲ್ಲ. ಆದರೆ ಆಧುನಿಕ ಜೀವನ ಶೈಲಿಯಲ್ಲಿ ಪ್ರಾಕೃತಿಕ ಬೆಳಕಿಗೆ ತಡೆಒಡ್ಡಿ ಬೆಳಕು ಮತ್ತು ಗಾಳಿಯಿಂದ ವಂಚಿತರಾಗಿದ್ದೇವೆ. ಇದರ ಜೊತೆಗೆ ಹವಾ ನಿಯಂತ್ರಣಕ್ಕಾಗಿಯಾದರೂ ಸ್ವಾಭಾವಿಕ ಗಾಳಿ ಮತ್ತು ಬೆಳಕಿಗೆ ನಿರ್ಬಂಧವೇರಿ ಕೃತಕ ಬೆಳಕಿಗಾಗಿ ವಿದ್ಯುತ್ ಬಳಸುತ್ತಿದ್ದೇವೆ. ಇತ್ತೀಚಿಗಂತೂ ಪಟ್ಟಣ ಪ್ರದೇಶಗಳ ಮನೆಗಳ ಮಧ್ಯದಲ್ಲಿ ಹೆಚ್ಚಿನ ಸ್ಥಳವನ್ನು ಬಿಡದೇ ಕಟ್ಟುತ್ತಿರುವುದು ಸಹ ಸ್ವಾಭಾವಿಕ ಬೆಳಕಿನಿಂದ ವಂಚಿತರಾಗಲು ಕಾರಣವಾಗಿದೆ. ಜನ ಸಾಮಾನ್ಯರು ಈ ನಿಟ್ಟಿನಲ್ಲಿ ಯೋಚಿಸಿ ಎಚ್ಚರಿಕೆ ಕ್ರಮ ವಹಿಸುವುದು ಸೂಕ್ತ.

೩. ಬೆಳಕಿನ ಅವಶ್ಯಕತೆಯಿದ್ದಾಗ ಮಾತ್ರ ವಿದ್ಯುತ್ ಬಳಸುವುದನ್ನು ಮನೆಗಳಲ್ಲಿ ಮಕ್ಕಳಿಗೆ ತಿಳಿಸುವುದು ತಂದೆ-ತಾಯಿಗಳ ಮತ್ತು ಸಮಾಜದ ಜವಾಬ್ದಾರಿಯಾಗಬೇಕಾಗಿದೆ. ಅನ್ನವನ್ನು ವ್ಯರ್ಥ ಮಾಡಬಾರದು, ನೀರನ್ನು ಮಿತವಾಗಿ ಬಳಸಬೇಕು ಎಂದು ಹೇಳುವ ಸಂದರ್ಭದಲ್ಲಿ ಇವೆರಡನ್ನು ಪಡೆಯಲು ಸಹಕಾರಿಯಾಗಿರುವ ವಿದ್ಯುತ್ ಉಳಿತಾಯದ ಬಗ್ಗೆ ಗಮನಹರಿಸುವುದೂ ಸಹ ಅಷ್ಟೇ ಪ್ರಾಮುಖ್ಯವಾದದ್ದಾಗಿದೆ.

೪. ವಿದ್ಯುತ್ ಬಳಸುವ ಎಲ್ಲಾ ಗ್ರಾಹಕರು ಇನ್ ಕ್ಯಾಂಡಸೆಂಟ್ ದೀಪ (ಬುರುಡೆಬಲ್ಬ್) ಬದಲಿಗೆ ಕಾಂಪ್ಯಾಕ್ಟ್ ಫ಼್ಲೋರೋಸೆಂಟ್ ಹಾಗೂ ಎಲ್.ಇ.ಡಿ. ದೀಪಗಳನ್ನು ಉಪಯೋಗಿಸುವುದು ಸೂಕ್ತ. ಸಿ.ಎಫ಼್.ಎಲ್. ಬಲ್ಬ್‌ಗಳ ಶೇ. ೭೫ ರಷ್ಟು ವಿದ್ಯುತ್ ಬಳಸಿ ಐ.ಸಿ.ಎಲ್. ಬಲ್ಬ್‌ಗಳು ನೀಡುವ ಪ್ರಮಾಣದ ಬೆಳಕನ್ನು ನೀಡುತ್ತವೆ.

ಮನೆ-ಮನೆಗಳಲ್ಲಿ ಸಿ.ಎಫ಼್.ಎಲ್. ಬಳಕೆಯಿಂದ ಶೇ. ೨೫ ರಷ್ಟು ವಿದ್ಯುತ್ ಉಳಿಸಿ ಮನೆಗಳ ವಿದ್ಯುತ್ ಬಿಲ್ ಕಡಿಮೆಗೊಳಿಸಬಹುದು. ಹಾಗೂ ಹೆಚ್ಚು ವಿದ್ಯುತ್ ಬಳಸುವ ಪ್ರದೇಶಗಳಲ್ಲಿ ಶೇ. ೨೫ ರಷ್ಟು ಸಂಖ್ಯೆಯಷ್ಟು ಸಿ.ಎಫ಼್.ಎಲ್. ಬಳಸುವುದರಿಂದ ಶೇ. ೫೦ ರಷ್ಟು ವಿದ್ಯುತ್ ಬಿಲ್ ಕಡಿಮೆಗೊಳಿಸಬಹುದು.

೫. ಮತ್ತೊಂದು ವಿಧಾನವೆಂದರೆ, ಸೋಲಾರ್ ವಾಟರ್ ಹೀಟರ್‌ಗಳ ಬಳಕೆ ಸೂರ್ಯನ ಬೆಳಕನ್ನು ಉಪಯೋಗಿಸಿ ನೀರನ್ನು ಬಿಸಿಮಾಡುವ ಉಪಕರಣವೇ ಸೋಲಾರ್ ವಾಟರ್ ಹೀಟರ್. ಬಿಸಿನೀರನ್ನು ಮನೆಗಳಲ್ಲಿ ಸ್ನಾನ ಮಾಡಲು ಮತ್ತು ಇತರೆ ಗೃಹಬಳಕೆಗೆ ಉಪಯೋಗಿಸಲಾಗುತ್ತಿದೆ.

೧೦೦ ಲೀ ಸಾಮರ್ಥ್ಯದ ಒಂದು ಸೋಲಾರ್ ವಾಟರ್ ಹೀಟರ್ ೫ ಜನರ ಕುಟುಂಬಕ್ಕೆ ಸಾಕಾಗುತ್ತದೆ. ಇದರ ಉಪಯೋಗದಿಂದ ಮನೆಗಳಲ್ಲಿ ಪ್ರತೀ ನಿತ್ಯ ೩ ಕಿ.ವಾ. ವಿದ್ಯುತ್  ಉಳಿತಾಯ  ಮಾಡಬಹುದು ಹಾಗೂ ವಾರ್ಷಿಕವಾಗಿ ೧೫೦೦ ಕಿ.ವಾ. ವಿದ್ಯುತ್ ಉಳಿಸಬಹುದಾಗಿದೆ. ಇವುಗಳನ್ನು ಮನೆಗಳಲ್ಲಿ ಅಳವಡಿಸಲು ತಗಲುವ ವೆಚ್ಚವನ್ನು ಮೂರರಿಂದ ಐದು ವರ್ಷಗಳಲ್ಲಿ ಹಿಂಪಡೆಯಬಹುದು. ನಂತರದ ವರ್ಷಗಳಲ್ಲಿ ಉಚಿತವಾಗಿ ಅಂದರೆ ಸುಮಾರು ೧೫-೨೦ ವರ್ಷಗಳು ಪಡೆಯಬಹುದಾಗಿದೆ.

ಸೋಲಾರ್ ವಾಟರ್ ಹೀಟರ್‌ಗಳನ್ನು ಮನೆಗಳ ಚಾವಣಿಯ ಮೇಲೆ ಅಳವಡಿಸುವುದು ಸೂಕ್ತ. ಒಂದುವೇಳೆ ಸ್ಥಳದ ಅಭಾವವಿದ್ದಲ್ಲಿ ಕಿಟಕಿಗಳ ಸಮೀಪ ಸಹ ಅಳವಡಿಸಬಹುದು. ಇವುಗಳ ನಿರ್ವಹಣೆ ಸುಲಭವಾಗಿದ್ದು ಅಳವಡಿಸಲು ೨ ಚ.ಮೀ. ಸ್ಥಳಾವಕಾಶ ಬೇಕಾಗುತ್ತದೆ. ೧೦೦ ಲೀಟರ್ ಸಾಮರ್ಥ್ಯದ ಸೋಲಾರ್ ವಾಟರ್ ಹೀಟರ್‌ನ ಬೆಲೆ ಮಾರುಕಟ್ಟೆಯಲ್ಲಿ ರೂ. ೧೮೦೦೦/- ದಿಂದ ರೂ. ೨೫೦೦೦/- ಇವುಗಳನ್ನು ಅಳವಡಿಸಲು ತಗಲುವ ಪ್ರಾರಂಭಿಕ ವೆಚ್ಚವನ್ನು ಸರಿದೂಗಿಸಲು ಶೇ. ೫ ರಷ್ಟರ ಸರಳಬಡ್ಡಿ ದರದಲ್ಲಿ ಸಾಲದ ಸೌಲಭ್ಯವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆಯಬಹುದು.ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಮಾಸಿಕವಾಗಿ ಪ್ರತಿ ಯೂನಿಟ್‌ಗೆ ವಿದ್ಯುತ್ ಬಳಕೆಯ ಮೇಲೆ ರೂ. ೫೦ ಪೈಸೆಯಂತೆ ರೂ. ೫೦/- ಮಾಸಿಕ ಬಿಲ್‌ನಿಂದ ಕಡಿತಗೊಳಿಸಲಾಗುತ್ತಿದೆ. ಇಂದು ಇವುಗಳ ಬಳಕೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.

ಸೋಲಾರ್ ವಾಟರ್ ಹೀಟರ್‌ನ್ನು ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಹೋಟೆಲ್‌ಗಳು, ಮಾಲ್‍ಗಳು, ವಸತಿ ನಿಲಯಗಳು ಕ್ಯಾಂಟೀನ್‌ಗಳು, ವಸತಿ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸುವುದರಿಂದ ಗಣನೀಯವಾಗಿ ವಿದ್ಯುತ್ ಉಳಿಸಬಹುದಾಗಿದೆ.
ಜೊತೆಗೆ ಅಂತಹ ಸಂಸ್ಥೆಗಳ ವಿದ್ಯುತ್ ಬಿಲ್‌ಗಳು ಸಹ ಕಡಿಮೆಯಾಗುತ್ತದೆ. ಇಂತಹ ಸಂಸ್ಥೆಗಳಿಗೆ ಪ್ರತಿ ಚ.ಮೀ.ಗೆ ರೂ. ೧೭೫೦/- ಸರ್ಕಾರದಿಂದ ಸಹಾಯಧನ ಲಭ್ಯವಿದೆ. ಹೌಸಿಂಗ್ ಕಾಂಪ್ಲೆಕ್ಸ್‌ಗಳಿಗೂ ರೂ. ೧೯೦೦ ಚ.ಮೀ.ಗೆ ಪಡೆಯಬಹುದು.

ಇಂಧನ ಉಳಿತಾಯ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಮತ್ತೊಂದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವುದರಿಂದ ಹಾಗೂ ವಾತಾವರಣಕ್ಕೆ ಯಾವುದೇ ರೀತಿಯ ಇಂಗಾಲ ಆಮ್ಲದ ಹೊರ ಸೂಸುವಿಕೆಯಿಲ್ಲದೇ ಇರುವುದು ಮಹತ್ವದ ವಿಚಾರವಾಗಿದ್ದು, ಕಡಿಮೆ ಇಂಗಾಲ ಅಥವಾ ಲೋ ಕಾರ್ಬನ್ ತಾಂತ್ರಿಕತೆಯಾಗಿದೆ.
ಇಂದು ವಿಶ್ವವ್ಯಾಪಿ ೮ ಬಿಲಿಯನ್ ಟನ್ ಇಂಗಾಲ ಆಮ್ಲ ಉತ್ಪತ್ತಿಯಾಗುತ್ತಿದ್ದು, ನಮ್ಮ ಭೂಮಿಯು ಕೇವಲ ೩.೧ ಬಿಲಿಯನ್ ಟನ್ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ರೀತಿಯಾಗಿ ಬಾಕಿ ಉಳಿಯುವ ಇಂಗಾಲ ಆಮ್ಲ ನಮ್ಮ ವಾತಾವರಣದಲ್ಲಿ ಶೇಖರಗೊಂಡು ಭೂ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ.
(ಪ್ರಜಾವಾಣಿ ದಿನಪತ್ರಿಕೆಯಲ್ಲಿ  14-05-2010 ಪ್ರಕಟವಾದ ಲೇಖನ )

No comments:

Post a Comment